ಅರಣ್ಯ.. 33. ಮೋಶೆ ಮತ್ತು ಆರೋನರ ನೇತೃತ್ವದಲ್ಲಿ ಈಜಿಪ್ಟ್ ದೇಶದಿಂದ ಹೊರಬಂದ ಇಸ್ರೇಲರ ಪ್ರಯಾಣಗಳ ವಿವರ: ಮೋಶೆ ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರೇಲರು ಪ್ರಯಾಣಗಳಲ್ಲಿ ಇಳಿದುಕೊಂಡ ಸ್ಥಳಗಳ ಹೆಸರುಗಳನ್ನು ಬರೆದನು. ಮೊದಲನೆ ತಿಂಗಳಿನ ಹದಿನೈದನೆಯ ದಿನದಲ್ಲಿ ಅವರು ರಮ್ಸೇಸ್ ಪಟ್ಟಣವನ್ನು ಬಿಟ್ಟು ಹೊರಟರು. ಪಸ್ಕಹಬ್ಬದ ಮರುದಿನದಲ್ಲಿ ಇಸ್ರೇಲರು ಜಯದೊಂದಿಗೆ ತಮ್ಮ ಕೈಗಳನ್ನು ಎತ್ತಿಕೊಂಡು ಈಜಿಪ್ಟಿನಿಂದ ಹೊರಗೆ ನಡೆದರು. ಈಜಿಪ್ಟಿನ ಜನರೆಲ್ಲರೂ ಇದನ್ನು ನೋಡಿದರು. ಈಜಿಪ್ಟಿನವರು ಯೆಹೋವನು ಕೊಂದುಹಾಕಿದ ತಮ್ಮ ಚೊಚ್ಚಲು ಮಕ್ಕಳನ್ನು ಹೂಳಿಡುತ್ತಿದ್ದರು. ಯೆಹೋವನು ಈಜಿಪ್ಟಿನ ದೇವರುಗಳನ್ನು ಶಿಕ್ಷಿಸಿದನು. ಇಸ್ರೇಲರು ರಮ್ಸೇಸ್‌ನಿಂದ ಹೊರಟು ಸುಕ್ಕೋತಿಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು. ಸುಕ್ಕೋತಿನಿಂದ ಅವರು ಏತಾಮಿಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು. ಜನರು ಅಲ್ಲಿ ಮರುಭೂಮಿಯ ಗಡಿಯಲ್ಲಿ ಪಾಳೆಯಮಾಡಿಕೊಂಡರು. ಅವರು ಏತಾಮನ್ನು ಬಿಟ್ಟು ಪೀಹಹೀರೋತಿಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು. ಇದು ಬಾಳ್ಚೆಫೋನಿನ ಹತ್ತಿರವಿತ್ತು. ಜನರು ಮಿಗ್ದೋಲಿನ ಬಳಿ ಪಾಳೆಯ ಮಾಡಿಕೊಂಡರು. ಜನರು ಪೀಹಹೀರೋತನ್ನು ಬಿಟ್ಟು ಸಮುದ್ರದ ಮಧ್ಯದಲ್ಲೇ ನಡೆದು ಮರುಭೂಮಿಗೆ ಬಂದರು. ಅವರು ಏತಾಮ್ ಮರುಭೂಮಿಯಲ್ಲಿ ಮೂರು ದಿನಗಳವರೆಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು. ಜನರು ಮಾರವನ್ನು ಬಿಟ್ಟು ಏಲೀಮಿಗೆ ಪ್ರಯಾಣ ಮಾಡಿ ಅಲ್ಲಿ ಇಳಿದುಕೊಂಡರು. ಅಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದವು. ಜನರು ಏಲೀಮನ್ನು ಬಿಟ್ಟು ಕೆಂಪುಸಮುದ್ರದ ಹತ್ತಿರ ಪಾಳೆಯ ಮಾಡಿಕೊಂಡರು. ಕೆಂಪುಸಮುದ್ರದಿಂದ ಹೊರಟು ಸೀನ್ ಅರಣ್ಯದಲ್ಲಿ ಪಾಳೆಯ ಮಾಡಿಕೊಂಡರು. ಸೀನ್ ಅರಣ್ಯದಿಂದ ಹೊರಟು ದೊಫ್ಕದಲ್ಲಿ ಇಳಿದುಕೊಂಡರು. ದೊಫ್ಕದಿಂದ ಹೊರಟು ಆಲೂಷಿನಲ್ಲಿ ಇಳಿದುಕೊಂಡರು. ಆಲೂಷಿನಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಅಲ್ಲಿ ಜನರಿಗೆ ಕುಡಿಯಲು ನೀರು ಇರಲಿಲ್ಲ. ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು. ಸೀನಾಯಿ ಮರುಭೂಮಿಯಿಂದ ಹೊರಟು ಕಿಬ್ರೋತ್ ಹತಾವದಲ್ಲಿ ಇಳಿದುಕೊಂಡರು. ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿನಲ್ಲಿ ಇಳಿದುಕೊಂಡರು. ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು. ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚಿನಲ್ಲಿ ಇಳಿದುಕೊಂಡರು. ರಿಮ್ಮೋನ್ ಪೆರೆಚಿನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು. ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು. ರಿಸ್ಸದಿಂದ ಹೊರಟು ಕೆಹೇಲಾತದಲ್ಲಿ ಇಳಿದುಕೊಂಡರು. ಕೆಹೇಲಾತದಿಂದ ಹೊರಟು ಶೆಫೆರ್ ಬೆಟ್ಟದಲ್ಲಿ ಇಳಿದುಕೊಂಡರು. ಶೆಫೆರ್ ಬೆಟ್ಟದಿಂದ ಹೊರಟು ಹರಾದದಲ್ಲಿ ಇಳಿದುಕೊಂಡರು. ಹರಾದದಿಂದ ಹೊರಟು ಮಖೇಲೋತಿನಲ್ಲಿ ಇಳಿದುಕೊಂಡರು. ಮಖೇಲೋತಿನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು. ತಹತಿನಿಂದ ಹೊರಟು ತೆರಹದಲ್ಲಿ ಇಳಿದುಕೊಂಡರು. ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು. ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು. ಹಷ್ಮೋನದಿಂದ ಹೊರಟು ಮೋಸೇರೋತಿನಲ್ಲಿ ಇಳಿದುಕೊಂಡರು. ಮೋಸೇರೋತಿನಿಂದ ಹೊರಟು ಬೆನೇಯಾಕಾನಿನಲ್ಲಿ ಇಳಿದುಕೊಂಡರು. ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದ್‌ನಲ್ಲಿ ಇಳಿದುಕೊಂಡರು. ಹೋರ್ಹಗಿದ್ಗಾದ್‌ನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು. ಯೊಟ್ಬಾತದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು. ಅಬ್ರೋನದಿಂದ ಹೊರಟು ಎಚ್ಯೋನ್‌ಗೆಬೆರಿನಲ್ಲಿ ಇಳಿದುಕೊಂಡರು. ಎಚ್ಯೋನ್‌ಗೆಬೆರಿನಿಂದ ಹೊರಟು ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು. ಅದು ಕಾದೇಶ್. ಕಾದೇಶಿನಿಂದ ಹೊರಟು ಎದೋಮ್ಯರ ದೇಶದ ಅಂಚಿನಲ್ಲಿರುವ ಹೋರ್ ಬೆಟ್ಟದ ಬಳಿಯಲ್ಲಿ ಇಳಿದುಕೊಂಡರು. ಮಹಾಯಾಜಕನಾದ ಆರೋನನು ಯೆಹೋವನಿಂದ ಆಜ್ಞಾಪಿಸಲ್ಪಟ್ಟ ಹೋರ್ ಬೆಟ್ಟವನ್ನು ಹತ್ತಿದನು. ಇಸ್ರೇಲರು ಈಜಿಪ್ಟನ್ನು ಬಿಟ್ಟು ಹೊರಟ ನಂತರ ನಲವತ್ತನೆ ವರ್ಷದ ಐದನೆ ತಿಂಗಳಿನ ಮೊದಲನೆ ದಿನದಲ್ಲಿ ಆರೋನನು ಅಲ್ಲಿ ಪ್ರಾಣಬಿಟ್ಟನು. ಆರೋನನು “ಹೋರ್” ಬೆಟ್ಟದಲ್ಲಿ ಸತ್ತಾಗ ಅವನಿಗೆ ನೂರಿಪ್ಪತ್ಮೂರು ವರ್ಷ ವಯಸ್ಸಾಗಿತ್ತು. ಇಸ್ರೇಲರು ಬರುತ್ತಾರೆಂಬ ಸುದ್ದಿಯನ್ನು ನೆಗೆವ್‌ನಲ್ಲಿ ವಾಸವಾಗಿದ್ದ ಅರಾದ್ ಪಟ್ಟಣದ ಅರಸನು ಕೇಳಿದನು. ಇಸ್ರೇಲರು ಹೋರ್ ಬೆಟ್ಟದಿಂದ ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು. ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು. ಪೂನೋನಿನಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು. ಓಬೋತಿನಿಂದ ಹೊರಟು ಮೋವಾಬ್ಯರ ಸರಹದ್ದಿನಲ್ಲಿರುವ ಜೋರ್ಡನ್ ಆಚೆ ಇರುವ ಇಯ್ಯಿಮಿನಲ್ಲಿ ಇಳಿದುಕೊಂಡರು. ಇಯ್ಯಿಮಿನಿಂದ ಹೊರಟು ದೀಬೋನ್‌ಗಾದಿನಲ್ಲಿ ಇಳಿದುಕೊಂಡರು. ದೀಬೋನ್‌ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದುಕೊಂಡರು. ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ಅಬಾರೀಮ್ ಬೆಟ್ಟಗಳಲ್ಲಿರುವ ನೆಬೋವಿನ ಪೂರ್ವದಿಕ್ಕಿನಲ್ಲಿ ಇಳಿದುಕೊಂಡರು. ಅಬಾರೀಮ್ ಬೆಟ್ಟಗಳಿಂದ ಹೊರಟು, ಜೆರಿಕೊ ಪಟ್ಟಣದ ಆಚೆಕಡೆಯಲ್ಲಿರುವ ಜೋರ್ಡನ್ ನದಿಯ ತೀರದಲ್ಲಿ ಮೋವಾಬಿನ ಬಯಲಿನಲ್ಲಿ ಇಳಿದುಕೊಂಡರು. ಅವರು ಮೋವಾಬ್ಯರ ಮೈದಾನದಲ್ಲಿ ಬೇತ್‌ಯೆಷೀಮೋತಿನಿಂದ ಅಬೇಲ್ ಶಿಟ್ಟೀಮಿನವರೆಗೂ ಜೋರ್ಡನ್ ನದಿಯ ತೀರದಲ್ಲಿ ಇಳಿದುಕೊಂಡರು. ಆ ಸ್ಥಳದಲ್ಲಿದ್ದಾಗ ಯೆಹೋವನು ಮೋಶೆಯೊಡನೆ ಮಾತಾಡಿ ಹೇಳಿದ್ದೇನೆಂದರೆ: “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ನೀವು ಜೋರ್ಡನ್ ಹೊಳೆದಾಟಿ ಕಾನಾನ್ ದೇಶವನ್ನು ಸೇರಿದಾಗ ಆ ದೇಶದ ನಿವಾಸಿಗಳನ್ನೆಲ್ಲ ಹೊರಡಿಸಿಬಿಟ್ಟು ಅವರ ಕೆತ್ತಿದ ಪ್ರತಿಮೆಗಳನ್ನು ಮತ್ತು ಲೋಹದ ವಿಗ್ರಹಗಳನ್ನು ನಾಶಮಾಡಿ ಅವರ ಪೂಜಾಸ್ಥಳಗಳನ್ನು ಹಾಳು ಮಾಡಬೇಕು. ನಾನು ನಿಮಗೆ ಆ ದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟಿದ್ದೇನೆ. ನೀವು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಬೇಕು. ನೀವು ಚೀಟುಹಾಕಿ ಆ ದೇಶವನ್ನು ನಿಮ್ಮನಿಮ್ಮ ಕುಲಗಳಿಗೆ ಹಂಚಿಕೊಳ್ಳಬೇಕು. ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆ ಮಂದಿಯುಳ್ಳ ಕುಲಕ್ಕೆ ಕಡಿಮೆಯಾಗಿಯೂ ಸ್ವಾಸ್ತ್ಯವು ದೊರೆಯಬೇಕು. ಒಂದೊಂದು ಕುಲಕ್ಕೆ ಯಾವಯಾವ ಸ್ಥಳವನ್ನು ಸೂಚಿಸುತ್ತದೋ ಆ ಸ್ಥಳದಲ್ಲಿಯೇ ಆ ಕುಲದ ಸ್ವಾಸ್ತ್ಯವಿರಬೇಕು. ಒಂದೊಂದು ಕುಲದ ಕುಟುಂಬಗಳು ಒಂದೇ ಪ್ರದೇಶದಲ್ಲಿರಬೇಕು. “ನೀವು ಆ ದೇಶದ ನಿವಾಸಿಗಳನ್ನು ಹೊರಡಿಸದೆ ಹೋದರೆ, ಅವರು ಉಳಿದುಕೊಂಡು ನಿಮ್ಮ ಕಣ್ಣುಗಳಲ್ಲಿ ಮರದ ಚೂರಿನಂತೆಯೂ ನಿಮ್ಮ ಪಕ್ಕೆಗಳಲ್ಲಿ ಮುಳ್ಳುಗಳಂತೆಯೂ ಇರುವರು. ನೀವು ವಾಸಿಸುವ ದೇಶದಲ್ಲಿ ನಿಮಗೆ ತೊಂದರೆ ಮಾಡುವರು. ಅದಲ್ಲದೆ, ನಾನು ಅವರಿಗೆ ಏನನ್ನು ಮಾಡಲು ಯೋಚಿಸಿದೆನೋ ಅದನ್ನು ನಿಮಗೆ ಮಾಡುವೆನು.”